ಕರ್ನಾಟಕ News

Discover the latest headlines in this section.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ಭೂಷಣ್ ಬೋರಸೆ ನೇಮಕ

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ಭೂಷಣ್ ಬೋರಸೆ ನೇಮಕ

ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೂತನ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ  ಭೂಷಣ್ ಗುಲಾಬ್ರಾವ್ ಬೋರಸೆ  ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಪ್ರಸ್ತುತ ಬೆಳಗಾವಿ ನಗರದ ಉಪ ಪೊಲೀಸ್ ಮಹಾನಿರೀಕ್ಷಕ ಹಾಗೂ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭೂಷಣ್ ಗುಲಾಬ್ರಾವ್ ಬೋರಸೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.ಸರ್ಕಾರದ ಆದೇಶದಂತೆ, ಮುಂದಿನ ಆದೇಶದವರೆಗೆಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಮಹಾನಿರೀಕ್ಷಕರಾಗಿ  ಬೋರಸೆ ಅವರು ಕಾರ್ಯನಿರ್ವಹಿಸಲಿದ್ದಾರೆ.ಇದೇ ವೇಳೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಎನ್. ಶಶಿಕುಮಾರ್, ಐಪಿಎಸ್  ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಭೂಷಣ್ ಬೋರಸೆ ಅವರನ್ನು ನೇಮಕ ಮಾಡಲಾಗಿದೆ.ನೂತನ ಪೊಲೀಸ್ ಆಯುಕ್ತರ ನೇಮಕದೊಂದಿಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ  ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಹಾಗೂ ಪೊಲೀಸ್ ಆಡಳಿತದಲ್ಲಿ ಮತ್ತಷ್ಟು ಬದಲಾವಣೆಗಳ ನಿರೀಕ್ಷೆ ಮೂಡಿದೆ.

Aug 29, 2026 | 12:17 PM
562 0
ತೋಳನಕೆರೆ ಉದ್ಯಾನವನದಲ್ಲಿ ಅವ್ಯವಸ್ಥೆ: ಟೈಲ್ಸ್‌ಗೆ ಎಡವಿ ಹಿರಿಯ ನಾಗರಿಕರಿಗೆ ಗಾಯ

ತೋಳನಕೆರೆ ಉದ್ಯಾನವನದಲ್ಲಿ ಅವ್ಯವಸ್ಥೆ: ಟೈಲ್ಸ್‌ಗೆ ಎಡವಿ ಹಿರಿಯ ನಾಗರಿಕರಿಗೆ ಗಾಯ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಹುಬ್ಬಳ್ಳಿಯ ತೋಳನಕೆರೆ ಉದ್ಯಾನವನದಲ್ಲಿ ನಿರ್ವಹಣಾ ಲೋಪದ ಆರೋಪ ಕೇಳಿಬಂದಿದೆ. ನಿನ್ನೆ ಸಂಜೆ ಉದ್ಯಾನವನದಲ್ಲಿ ನಡೆದಾಡುತ್ತಿದ್ದ ಹಿರಿಯ ನಾಗರಿಕರೊಬ್ಬರು ಏರುಪೇರಾಗಿರುವ ಟೈಲ್ಸ್‌ಗೆ ಕಾಲು ತಾಗಿ ಎಡವಿ ಬಿದ್ದು, ಮುಖ ಹಾಗೂ ಬಾಯಿಗೆ ಗಾಯ ಮಾಡಿಕೊಂಡಿರುವ ಘಟನೆ ನಡೆದಿದೆ.ಉದ್ಯಾನವನದಲ್ಲಿ ಸಾರ್ವಜನಿಕರ ಓಡಾಟಕ್ಕಾಗಿ ಅಳವಡಿಸಿರುವ ಕೆಲವು ಟೈಲ್ಸ್‌ಗಳು ಸಮತಟ್ಟಾಗದೆ ಅಲ್ಲಲ್ಲಿ ಮೇಲೆ-ಕೆಳಗೆ ಆಗಿರುವುದು ಕಂಡುಬಂದಿದೆ. ಇದೇ ಕಾರಣಕ್ಕೆ ಹಿರಿಯ ನಾಗರಿಕರು ನಡೆದಾಡುವ ಸಂದರ್ಭದಲ್ಲಿ ಕಾಲು ಟೈಲ್ಸ್‌ಗೆ ತಾಗಿ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ.ಅದೃಷ್ಟವಶಾತ್ ಘಟನೆಯಲ್ಲಿ ಹಿರಿಯ ನಾಗರಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಉದ್ಯಾನವನದಲ್ಲಿ ಇಂತಹ ಲೋಪದೋಷಗಳು ಮುಂದುವರಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.ತೋಳನಕೆರೆ ಉದ್ಯಾನವನಕ್ಕೆ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಪ್ರತಿದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಹೀಗಾಗಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಉದ್ಯಾನವನದಲ್ಲಿರುವ ಏರುಪೇರು ಟೈಲ್ಸ್‌ಗಳು ಸೇರಿದಂತೆ ಎಲ್ಲಾ ಲೋಪದೋಷಗಳನ್ನು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಪರಿಶೀಲಿಸಿ ದುರಸ್ತಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರತಿಷ್ಠಿತ ಉದ್ಯಾನವನದಲ್ಲಿ ಮೂಲಸೌಕರ್ಯಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಮತ್ತೊಂದು ಅಪಘಾತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

Aug 27, 2026 | 04:20 AM
35 0
ಹುಬ್ಬಳ್ಳಿಯಲ್ಲಿ ಹಿರಿಯ ವ್ಯಕ್ತಿಗೆ ಆಟೋ ಡಿಕ್ಕಿ: ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿಯಲ್ಲಿ ಹಿರಿಯ ವ್ಯಕ್ತಿಗೆ ಆಟೋ ಡಿಕ್ಕಿ: ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ: ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಶೆಲ್ ಪೆಟ್ರೋಲ್ ಬಂಕ್ ಸಮೀಪದ ಮುಖ್ಯ ರಸ್ತೆಯಲ್ಲಿ ಹಿರಿಯ ವ್ಯಕ್ತಿಯೊಬ್ಬರಿಗೆ ಆಟೋ ಡಿಕ್ಕಿ ಹೊಡೆದು, ಆಟೋ ಚಾಲಕ ಪರಾರಿಯಾಗಿರುವ ಘಟನೆ ನಡೆದಿದೆ ಎನ್ನಲಾಗಿದೆ.ಸ್ಥಳೀಯರ ಮಾಹಿತಿ ಪ್ರಕಾರ, ರಸ್ತೆ ದಾಟುತ್ತಿದ್ದ ಹಿರಿಯ ವ್ಯಕ್ತಿಗೆ ಆಟೋ ಡಿಕ್ಕಿ ಹೊಡೆದಿದ್ದು, ಅಪಘಾತದ ಬಳಿಕ ಆಟೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.ಡಿಕ್ಕಿಯ ಪರಿಣಾಮ ಹಿರಿಯ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದ್ದು, ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಪರಿಶೀಲನೆ ನಡೆಸುವ ಸಾಧ್ಯತೆಯಿದೆ. ಪರಾರಿಯಾಗಿರುವ ಆಟೋ ಚಾಲಕನ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Aug 23, 2026 | 04:14 PM
482 0
ಪತ್ರಕರ್ತನ ಮೇಲಿನ ಹಲ್ಲೆ: ಸರ್ಕಾರಿ ವೈದ್ಯಾಧಿಕಾರಿ ಅಮಾನತು

ಪತ್ರಕರ್ತನ ಮೇಲಿನ ಹಲ್ಲೆ: ಸರ್ಕಾರಿ ವೈದ್ಯಾಧಿಕಾರಿ ಅಮಾನತು

ಬೆಂಗಳೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕನ್ನಡ ಪ್ರಭ ಪತ್ರಿಕೆಯ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅವರನ್ನು ಅಮಾನತುಗೊಳಿಸಲಾಗಿದೆ.ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ತಮ್ಮ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ವರ್ಗಾವಣೆ ಮಾಡಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶಿಸಿತ್ತು. ಆದರೆ, ಅವರು ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗದೆ, ಆಗಸ್ಟ್ 4ರಿಂದ ಸೆಪ್ಟೆಂಬರ್ 30ರವರೆಗೆ ರಜೆಯಲ್ಲಿದ್ದರು ಎಂದು ತಿಳಿದುಬಂದಿದೆ.ಈ ನಡುವೆ, ಆಗಸ್ಟ್ 21ರಂದು ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರು ತಮ್ಮ ಪತ್ನಿಯೊಂದಿಗೆ ಕುಂದಾಪುರದ ಹೋಟೆಲ್‌ನಲ್ಲಿ ತಿಂಡಿ ಸೇವಿಸುತ್ತಿದ್ದ ವೇಳೆ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಹಾಗೂ ಅವರ ಪತ್ನಿ ಅಲ್ಲಿಗೆ ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತರು ನೀಡಿದ ದೂರಿನ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ತಕ್ಷಣ ಸ್ಪಂದಿಸಿ, ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದರು.ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಿಂದ ವರದಿ ಪಡೆಯಲಾಗಿದ್ದು, ವರದಿಯಲ್ಲಿ ಮೇಲ್ನೋಟಕ್ಕೆ ಆರೋಪದಲ್ಲಿ ಸತ್ಯಾಂಶ ಕಂಡುಬಂದ ಹಿನ್ನೆಲೆಯಲ್ಲಿ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅವರನ್ನು ಅಮಾನತುಗೊಳಿಸಲಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಗುರುದತ್ತ ಹಗಡೆ ಅವರು ಅಮಾನತು ಆದೇಶ ಹೊರಡಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡಿರುವುದು ಇದೀಗ ಗಮನ ಸೆಳೆದಿದೆ.

Aug 23, 2026 | 02:17 AM
199 0
ಹುಬ್ಬಳ್ಳಿಯಲ್ಲಿ CL-2 ಲೈಸೆನ್ಸ್‌ನಲ್ಲೇ ಬಾರ್ ಅಂಡ್ ರೆಸ್ಟೋರೆಂಟ್? ಅಬಕಾರಿ ಇಲಾಖೆಯ ಮೌನಕ್ಕೆ ಪ್ರಶ್ನೆ

ಹುಬ್ಬಳ್ಳಿಯಲ್ಲಿ CL-2 ಲೈಸೆನ್ಸ್‌ನಲ್ಲೇ ಬಾರ್ ಅಂಡ್ ರೆಸ್ಟೋರೆಂಟ್? ಅಬಕಾರಿ ಇಲಾಖೆಯ ಮೌನಕ್ಕೆ ಪ್ರಶ್ನೆ

ಹುಬ್ಬಳ್ಳಿ: ನಗರದಲ್ಲಿ CL-2 ಮದ್ಯ ಮಾರಾಟ ಪರವಾನಗಿ ಹೊಂದಿರುವ ಕೆಲ ಮದ್ಯದಂಗಡಿಗಳಲ್ಲಿ ನಿಯಮ ಮೀರಿ ಬಾರ್ ಅಂಡ್ ರೆಸ್ಟೋರೆಂಟ್ ಮಾದರಿಯಲ್ಲಿ ವ್ಯವಹಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ನಿಯಮಾನುಸಾರ ಅನುಮತಿ ಇಲ್ಲದೆ ಗ್ರಾಹಕರಿಗೆ ಮದ್ಯದೊಂದಿಗೆ ಆಹಾರ ಸೇವನೆಗೆ ಅವಕಾಶ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಹುಬ್ಬಳ್ಳಿಯ ಹಳೆ ಹುಬ್ಬಳ್ಳಿ ಭಾಗದಲ್ಲಿ ಚನ್ನಪೇಟೆ ಕಡೆಗೆ ತೆರಳುವ ಮಾರ್ಗದಲ್ಲಿರುವ ಶ್ರೀ ರೇಣುಕಾ ವೈನ್ ಹೌಸ್‌ನಲ್ಲಿ CL-2 ಲೈಸೆನ್ಸ್ ಹೊಂದಿದ್ದರೂ, ಬಾರ್ ಅಂಡ್ ರೆಸ್ಟೋರೆಂಟ್ ರೀತಿಯಲ್ಲಿ ವ್ಯವಹಾರ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.CL-2 ಪರವಾನಗಿಯ ವ್ಯಾಪ್ತಿ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ನಡೆಸಲು ಅಗತ್ಯವಿರುವ ಪ್ರತ್ಯೇಕ ಅನುಮತಿಗಳು ಹಾಗೂ ಷರತ್ತುಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಅಬಕಾರಿ ಇಲಾಖೆ ಪರಿಶೀಲಿಸಬೇಕಿದೆ. ಆದರೆ ಇಂತಹ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳಿದ್ದರೂ ಇದುವರೆಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಶೀಲನೆ ಅಥವಾ ಕ್ರಮ ಕೈಗೊಂಡಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ.ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಅಥವಾ ಗೊತ್ತಿದ್ದರೂ ಮೌನವೇ?ಕಾನೂನು ಮತ್ತು ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ವ್ಯವಹಾರ ನಡೆಸಲಾಗುತ್ತಿದೆ ಎಂಬ ಆರೋಪಗಳು ಸತ್ಯವಾಗಿದ್ದರೆ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರವಾನಗಿ ಷರತ್ತುಗಳ ಉಲ್ಲಂಘನೆಯಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕಿದೆ. ತಪ್ಪು ಕಂಡುಬಂದಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.ಇದೇ ರೀತಿಯಲ್ಲಿ ಹುಬ್ಬಳ್ಳಿ ನಗರದ ವಿವಿಧ ಭಾಗಗಳಲ್ಲಿ CL-2 ಲೈಸೆನ್ಸ್ ಹೊಂದಿರುವ ಕೆಲವು ಮದ್ಯದಂಗಡಿಗಳು ನಿಯಮಬಾಹಿರವಾಗಿ ಬಾರ್ ಅಂಡ್ ರೆಸ್ಟೋರೆಂಟ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ.CL-2 ಲೈಸೆನ್ಸ್‌ನಲ್ಲೇ ಬಾರ್ ಅಂಡ್ ರೆಸ್ಟೋರೆಂಟ್ ನಡೆಸಲು ಅವಕಾಶ ಇದೆಯೇ?ಅನುಮತಿ ಮತ್ತು ಪರವಾನಗಿ ಷರತ್ತುಗಳ ಕುರಿತು ಅಬಕಾರಿ ಇಲಾಖೆ ಸ್ಪಷ್ಟನೆ ನೀಡಬೇಕಿದೆ. ಸ್ಥಳ ಪರಿಶೀಲನೆ ನಡೆಸಿ ನಿಯಮ ಉಲ್ಲಂಘನೆ ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದನ್ನೂ ಇಲಾಖೆ ಸಾರ್ವಜನಿಕರಿಗೆ ತಿಳಿಸಬೇಕಿದೆ.ಈ ಕುರಿತು ದಾಖಲೆಗಳು, ಪರವಾನಗಿ ವಿವರಗಳು ಹಾಗೂ ಸ್ಥಳೀಯ ಪರಿಶೀಲನೆಯ ಆಧಾರದ ಮೇಲೆ ‘ಪಬ್ಲಿಕ್ ರೈಡ್’ ಮುಂದಿನ ವರದಿಯಲ್ಲಿ ಹುಬ್ಬಳ್ಳಿಯ ಇನ್ನಷ್ಟು ಪ್ರಕರಣಗಳನ್ನು ಬಹಿರಂಗಪಡಿಸಲಿದೆ.

Aug 19, 2026 | 01:53 AM
159 0
ಗಣೇಶ ಹಬ್ಬಕ್ಕೆ ಧ್ವನಿವರ್ಧಕ, ಪಿಓಪಿ ವಿಗ್ರಹಗಳಿಗೆ ಕಡಿವಾಣ

ಗಣೇಶ ಹಬ್ಬಕ್ಕೆ ಧ್ವನಿವರ್ಧಕ, ಪಿಓಪಿ ವಿಗ್ರಹಗಳಿಗೆ ಕಡಿವಾಣ

ಧಾರವಾಡ: ಗಣೇಶ ಹಬ್ಬದ ವೇಳೆ ಮಿತಿ ಮೀರಿ ಡಿಜೆ ಸೌಂಡ್ ಸಿಸ್ಟಮ್ ಬಳಸಿದರೆ 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಎಚ್ಚರಿಕೆ ನೀಡಿದ್ದಾರೆ.ಜಿಲ್ಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಗಣೇಶ ವಿಗ್ರಹಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಿಓಪಿ ವಿಗ್ರಹಗಳು ಕಂಡುಬಂದರೆ ಜಪ್ತಿ ಮಾಡಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಗಣೇಶ ಹಬ್ಬದ ವೇಳೆ ಡಿಜೆ ಬದಲಿಗೆ ಡೊಳ್ಳು ಕುಣಿತ, ಹೆಜ್ಜೆ ಮೇಳ, ಕರಡಿ ಮಜಲು ಸೇರಿದಂತೆ ಸಾಂಪ್ರದಾಯಿಕ ಕಲೆಗಳಿಗೆ ಪ್ರೋತ್ಸಾಹ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಪಿಓಪಿ ವಿಗ್ರಹಗಳ ಅಕ್ರಮ ಸಾಗಾಟ ತಡೆಯಲು ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ.ಹು-ಧಾ ಮಹಾನಗರ ಪಾಲಿಕೆಯಿಂದ ಮಣ್ಣಿನ ಗಣಪತಿ ತಯಾರಕರಿಗೆ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣಪತಿ ಬಳಸಿ, ನಿಯೋಜಿತ ನೀರಿನ ತೊಟ್ಟಿಗಳಲ್ಲೇ ವಿಸರ್ಜನೆ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Aug 19, 2026 | 03:41 AM
35 0
15ನೇ ಆಗಸ್ಟ್ ಸ್ವಾತಂತ್ರ್ಯ ದಿನಾಚರಣೆ – ಗ್ರಾಮ ಪಂಚಾಯತ ಕಣಗಲಾ

15ನೇ ಆಗಸ್ಟ್ ಸ್ವಾತಂತ್ರ್ಯ ದಿನಾಚರಣೆ – ಗ್ರಾಮ ಪಂಚಾಯತ ಕಣಗಲಾ

ಕಣಗಲಾ ಗ್ರಾಮ ಪಂಚಾಯತ್ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗ್ರಾಮ ಪಂಚಾಯತ ಆವರಣದಲ್ಲಿ ರಾಷ್ಟ್ರಧ್ವಜಾರೋಹಣವನ್ನು ಗ್ರಾಮ ಪಂಚಾಯತ ಆಡಳಿತಾಧಿಕಾರಿಯಾದ ನೇಮಕವಾಗಿರುವ  ಶ್ರೀ ಪ್ರಶಾಂತ ಮುನ್ನೋಳಿ ಸರ್ ಇವರು ನೆರವೇರಿಸಿದರು .ಸರಿ ಕಾರ್ಯಕ್ರಮದಲ್ಲಿ ಕಣಗಲಾ ಗ್ರಾಮದ ಆಜಿ-ಮಾಜಿ ಸೈನಿಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು,, ಸದಸ್ಯರು,  ಪಂಚಾಯತ ಅಭಿವೃದ್ಧಿ ಅಧಿಕಾರಿ, ಸದಸ್ಯರು, ಗ್ರಾಮಸ್ಥರು ಹಾಗೂ ಗಣ್ಯರು ಉಪಸ್ಥಿತರಿದ್ದರು.ನಂತರ ರಾಷ್ಟ್ರಗೀತೆ ಹಾಡಿ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸಲಾಯಿತು.ಕಾರ್ಯಕ್ರಮದಲ್ಲಿ ಇತ್ತಿಚಿಗೆ 17 ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸಿ ಬಂದಿರುವ ಮಾತನಾಡಿದ ಮಾಜಿ ಸೈನಿಕರಾದ  ಶ್ರೀ ಉಮೇಶ ಗುರವ ಹಾಗೂ ಅಮಿತ ಹಸೂರೆ ಇವರು ಮಾತನಾಡಿ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬ ನಾಗರಿಕರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಗ್ರಾಮಗಳ ಅಭಿವೃದ್ಧಿ, ಸ್ವಚ್ಛತೆ, ಶಿಕ್ಷಣ ಹಾಗೂ ಸಾಮಾಜಿಕ ಏಕತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರು, ಅಧಿಕಾರಿಗಳು, ಶಾಲಾ ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು,  ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಅದೇ ತರನಾಗಿ ಈ ಕಾರ್ಯಕ್ರಮದ ನಂತರ ಕಣಗಲಾ ಗ್ರಾಮದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮಾ ವೃತ್ತವನ್ನು ಸಹ ಲಕ್ಷ್ಮೀ ಗಲ್ಲಿಯ ವಾಳಕಿ ರಸ್ತೆಯಲ್ಲಿರುವ ಶ್ರೀ ಕುಂತಿನಾಥ ಕಮತೆ ಇವರ ಮನೆಯ ಹತ್ತಿರ ಉದ್ಘಾಟನೆ ಮಾಡಲಾಯಿತು. ಸದರಿ ಉದ್ಘಾಟನೆಯನ್ನು ಶ್ರೀ ಅಣ್ಣಾವೃ ರೇಂಗಟೆ, ಶ್ರೀ ಅಶೋಕ ಹಿರೆಕೋಡಿ, ಶ್ರೀ ರಾಜು ಆದಪ್ಪಾ ಕಮತೆ, ಸಿದ್ದು ಕರಿಗಾರ, ಮಾರುತಿ ನಾಯಿಕ, ಶಂಕರ ಕಲ್ಯಾಣಿ, ಅಣ್ಣಪ್ಪಾ ಕೋರೆ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.ವರದಿಗಾರರು:ಸಂತೋಷ ನಿರ್ಮಲೆ (ಬೆಳಗಾವಿ)

Aug 16, 2026 | 01:57 PM
214 0
ಗುರು ರಾಘವೇಂದ್ರ ಸ್ವಾಮಿಗಳ ಪವಾಡವೇ? 7 ತಿಂಗಳ ಬಳಿಕ ಮತ್ತೆ ನಡೆದಾಡಿದ ಮೆಡಿಕಲ್ ವಿದ್ಯಾರ್ಥಿನಿ!

ಗುರು ರಾಘವೇಂದ್ರ ಸ್ವಾಮಿಗಳ ಪವಾಡವೇ? 7 ತಿಂಗಳ ಬಳಿಕ ಮತ್ತೆ ನಡೆದಾಡಿದ ಮೆಡಿಕಲ್ ವಿದ್ಯಾರ್ಥಿನಿ!

ಹಾವೇರಿ: ಅಪರೂಪದ ಆಟೋಇಮ್ಯೂನ್ ಸಮಸ್ಯೆಯಿಂದ ಕಳೆದ ಏಳು ತಿಂಗಳಿಂದ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ 22 ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬರು ಇದೀಗ ಮತ್ತೆ ಸ್ವತಂತ್ರವಾಗಿ ನಡೆಯುವಂತಾಗಿದ್ದಾರೆ.ಈ ಚೇತರಿಕೆಯನ್ನು ಕುಟುಂಬಸ್ಥರು ಗುರು ರಾಘವೇಂದ್ರ ಸ್ವಾಮಿಗಳ ಕೃಪೆ ಹಾಗೂ ಆಶೀರ್ವಾದ ಎಂದು ನಂಬಿದ್ದಾರೆ.ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವೇದಿತಾ ಶಿವಪ್ಪ ನೆಗಳೂರು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಕಳೆದ ಏಳು ತಿಂಗಳಿಂದ ಪದೇಪದೇ ಮೂರ್ಚೆ ಹೋಗುವುದು, ಕೈ-ಕಾಲುಗಳ ಸ್ವಾಧೀನ ಕಳೆದುಕೊಳ್ಳುವುದು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ತೀವ್ರ ತೊಂದರೆಯಿಂದಾಗಿ ಅವರು ವೀಲ್‌ಚೇರ್‌ ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಹಾವೇರಿ ಹಾಗೂ ಹುಬ್ಬಳ್ಳಿಯ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ನಿರೀಕ್ಷಿತ ಮಟ್ಟದ ಚೇತರಿಕೆ ಕಂಡುಬಂದಿರಲಿಲ್ಲ. ಚಿಕಿತ್ಸೆಗಾಗಿ ಕುಟುಂಬಸ್ಥರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದರೂ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಕುಟುಂಬವು ಆಧ್ಯಾತ್ಮಿಕ ಮಾರ್ಗದ ಮೊರೆ ಹೋಯಿತು.ಈ ಸಂದರ್ಭದಲ್ಲಿ ಕುಟುಂಬಸ್ಥರು ಹೊಸರಿತ್ತಿ ರಾಯರ ಮಠಕ್ಕೆ ತೆರಳಿದ್ದರು. ಅಲ್ಲಿ 100ನೇ ಸುಶೀಲೇಂದ್ರತೀರ್ಥ ಆರಾಧನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದವನ್ನು ನಿವೇದಿತಾ ಪಡೆದರು. ಸ್ವಾಮೀಜಿಗಳು ಅವರಿಗೆ ರಾಯರ ಮಂತ್ರಾಕ್ಷತೆ ಹಾಗೂ ಭಾವಚಿತ್ರ ನೀಡಿ, ಐದು ವಾರಗಳ ಕಾಲ ಹರಕೆ ನಡೆಸುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.ಕುಟುಂಬಸ್ಥರ ಪ್ರಕಾರ, ಹರಕೆ ಆರಂಭಿಸಿದ ಕೇವಲ ಮೂರು ವಾರಗಳಲ್ಲೇ ನಿವೇದಿತಾ ಅವರ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಕಾಣಿಸಿಕೊಂಡಿತು. ಐದು ವಾರಗಳ ಹರಕೆ ಪೂರ್ಣಗೊಳಿಸಿದ ಬಳಿಕ ಇದೀಗ ಅವರು ಸ್ವತಃ ನಡೆಯುವುದಲ್ಲದೆ ಓಡಾಡುವಂತಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಏಳು ತಿಂಗಳ ಕಾಲ ವೀಲ್‌ಚೇರ್‌ನಲ್ಲಿದ್ದ ಮೆಡಿಕಲ್ ವಿದ್ಯಾರ್ಥಿನಿ ಮತ್ತೆ ತನ್ನ ಕಾಲ ಮೇಲೆ ನಿಂತು ನಡೆಯುತ್ತಿರುವುದು ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ. ಈ ಚೇತರಿಕೆಯ ಹಿಂದೆ ಗುರು ರಾಘವೇಂದ್ರ ಸ್ವಾಮಿಗಳ ಕೃಪೆಯೇ ಕಾರಣ ಎಂದು ಕುಟುಂಬಸ್ಥರು ಭಕ್ತಿಭಾವದಿಂದ ನಂಬಿದ್ದಾರೆ.

Aug 16, 2026 | 05:03 AM
90 0
ಕಣಗಲಾ ಗ್ರಾಮದ ಗ್ರಾಮ ಆಡಳಿತ (ಕಂದಾಯ) ಕಛೇರಿಯಲ್ಲಿ ಸಂಭ್ರಮದಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

ಕಣಗಲಾ ಗ್ರಾಮದ ಗ್ರಾಮ ಆಡಳಿತ (ಕಂದಾಯ) ಕಛೇರಿಯಲ್ಲಿ ಸಂಭ್ರಮದಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

ಕಣಗಲಾ ಆಗಸ್ಟ್ 15:ಗ್ರಾಮದ ಗ್ರಾಮ ಆಡಳಿತ ಕಛೇರಿಯ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಹಾಗೂ ದೇಶಭಕ್ತಿ ಭಾವನೆಯೊಂದಿಗೆ ಆಚರಿಸಲಾಯಿತು. 1947ರ ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯ ಪಡೆದಿದ್ದು, 2026ರಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾಮ ಪ್ರಮುಖರಾದ ಶ್ರೀ ಮಹಾದೇವ ಮಲ್ಲಪ್ಪಾ ಮಗದುಮ ಇವರು ಧ್ವಜಾರೋಹಣ ನೆರವೇರಿಸಿದರು. ನಂತರ ರಾಷ್ಟ್ರಗೀತೆ ಮೊಳಗಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಆಡಳಿತ ಶ್ರೀ ವಿಠ್ಠಲ ಬುಗನಟ್ಟಿ ಅವರು, “ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ಆದರ್ಶಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.” ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗ್ರಾಮ ಆಡಳಿತ ಅಧಿಕಾರಿ, ಸಿಬ್ಬಂದಿ, ಕಣಗಲಾ ಗೃಹ ರಕ್ಷಕ ದಳದ ಎಲ್ಲ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.ಕೊನೆಯಲ್ಲಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.

Aug 15, 2026 | 02:28 PM
249 0
ಹುಬ್ಬಳ್ಳಿ  ಸುತ್ತಮುತ್ತ ಅಕ್ರಮ ಮಣ್ಣು ಗಣಿಗಾರಿಕೆ ಆರೋಪ: ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಪ್ರಶ್ನೆ

ಹುಬ್ಬಳ್ಳಿ ಸುತ್ತಮುತ್ತ ಅಕ್ರಮ ಮಣ್ಣು ಗಣಿಗಾರಿಕೆ ಆರೋಪ: ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಪ್ರಶ್ನೆ

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಮಾವನೂರು, ಚೆನ್ನಾಪುರ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅನುಮತಿ ಹಾಗೂ ನಿಯಮಗಳನ್ನು ಮೀರಿ ನಡೆಯುತ್ತಿರುವ ಮಣ್ಣು ಗಣಿಗಾರಿಕೆಯಿಂದ ಕೃಷಿ ಭೂಮಿ, ಪರಿಸರ ಹಾಗೂ ಸ್ಥಳೀಯ ಭೌಗೋಳಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.ಗ್ರಾಮಗಳ ವ್ಯಾಪ್ತಿಯಲ್ಲಿ ನಿರಂತರವಾಗಿ ಮಣ್ಣು ತೆಗೆಯಲಾಗುತ್ತಿದೆ ಎನ್ನಲಾಗುತ್ತಿದ್ದು, ಇದರಿಂದ ಭೂಮಿಯ ಸ್ವರೂಪವೇ ಬದಲಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಕೆಲವು ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ ದೊಡ್ಡ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ಅವು ಅಪಾಯಕಾರಿಯಾಗುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಈ ವಿಚಾರ ಬಂದಿಲ್ಲವೇ? ಅಥವಾ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆಯೇ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಜೋರಾಗಿವೆ.ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ರಾಜಸ್ವಕ್ಕೂ ನಷ್ಟವಾಗುವ ಸಾಧ್ಯತೆಯಿದ್ದು, ಪರಿಸರದ ಮೇಲೆ ಬೀರುವ ಪರಿಣಾಮದ ಬಗ್ಗೆಯೂ ಗಂಭೀರವಾಗಿ ಪರಿಶೀಲನೆ ನಡೆಸಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ಮಣ್ಣು ಸಾಗಾಟ ನಡೆಯುತ್ತಿದ್ದರೆ, ಸಂಬಂಧಪಟ್ಟ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಅಕ್ರಮ ಮಣ್ಣು ಗಣಿಗಾರಿಕೆಯ ಆರೋಪಗಳ ಕುರಿತು ಜಿಲ್ಲಾಡಳಿತ ಮತ್ತು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.ಮಾವನೂರು, ಚೆನ್ನಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಈ ಅಕ್ರಮ ಗಣಿಗಾರಿಕೆಯ ಬಗ್ಗೆ ಜಿಲ್ಲಾಡಳಿತ ಯಾವಾಗ ಎಚ್ಚೆತ್ತುಕೊಳ್ಳಲಿದೆ? ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವರೇ? ಆರೋಪಗಳಿಗೆ ತೆರೆ ಎಳೆಯಲು ಕಠಿಣ ಕ್ರಮ ಕೈಗೊಳ್ಳುವರೇ? ಎಂಬುದನ್ನು ಕಾದು ನೋಡಬೇಕಿದೆ.

Aug 14, 2026 | 11:17 AM
125 0
ಸೇಂಟ್ ಜಾನ್ಸ್ ಸಮರಿಟನ್ ಶಾಲೆಯಲ್ಲಿ ಪದಗ್ರಹಣ ಸಮಾರಂಭ

ಸೇಂಟ್ ಜಾನ್ಸ್ ಸಮರಿಟನ್ ಶಾಲೆಯಲ್ಲಿ ಪದಗ್ರಹಣ ಸಮಾರಂಭ

ಹುಬ್ಬಳ್ಳಿ, ಆಗಸ್ಟ್ 12: ಆನಂದ ನಗರದ ಸೇಂಟ್ ಜಾನ್ಸ್ ಸಮರಿಟನ್ ಇಂಗ್ಲಿಷ್ ಮೀಡಿಯಂ ಹೈಯರ್ ಮತ್ತು ಪ್ರೈಮರಿ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ (ಬ್ಯಾಡ್ಜ್) ಸಮಾರಂಭವು ಸಂಭ್ರಮದಿಂದ ಜರುಗಿತು.ಕಾರ್ಯಕ್ರಮದಲ್ಲಿ ಸಿಆರ್‌ಪಿ ಶ್ರೀ ರವಿ ಬಂಗೇನ್ನವರ್ ಅವರು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿಯೊಂದಿಗೆ ಭಾಗವಹಿಸಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕರಿಗೆ ಅಧಿಕೃತವಾಗಿ ಬ್ಯಾಡ್ಜ್‌ಗಳನ್ನು ಧರಿಸಿ, ನಾಯಕತ್ವದ ಜವಾಬ್ದಾರಿಯನ್ನು ವಹಿಸಲಾಯಿತು. ವಿದ್ಯಾರ್ಥಿಗಳಲ್ಲಿ ಶಿಸ್ತು, ಜವಾಬ್ದಾರಿ, ನಾಯಕತ್ವ ಹಾಗೂ ಸೇವಾ ಮನೋಭಾವ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.ವಿದ್ಯಾರ್ಥಿ ನಾಯಕರು ಶಾಲೆಯ ಶೈಕ್ಷಣಿಕ ಹಾಗೂ ಶಿಸ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ನೂತನ ವಿದ್ಯಾರ್ಥಿ ನಾಯಕರಿಗೆ ಶುಭಹಾರೈಸಿ, ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಪ್ರೋತ್ಸಾಹಿಸಿದರು. ಸಮಾರಂಭದಲ್ಲಿ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Aug 12, 2026 | 12:25 PM
27 0
ವಿದ್ಯಾರ್ಥಿಗಳು ತಾಂತ್ರಿಕ, ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ.  ಶಾಸಕ ಶ್ರೀ ಅರವಿಂದ ಬೆಲ್ಲದ.

ವಿದ್ಯಾರ್ಥಿಗಳು ತಾಂತ್ರಿಕ, ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ಶಾಸಕ ಶ್ರೀ ಅರವಿಂದ ಬೆಲ್ಲದ.

ಧಾರಾವಾಡ -ರಾಯಾಪುರದಲ್ಲಿರುವ ಎಸ್.ಜೆ. ಎಂ.ವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂದು ಐ ಟಿ ಸಿ, ಪ್ರಥಮ ಎಜುಕೇಶನ್ ಫೌಂಡೇಶನ,ಹಾಸ್ಪಿಟಾಲಿಟಿ ಉದ್ಯೋಗ ತರಬೇತಿ ಕೇಂದ್ರ ಹುಬ್ಬಳ್ಳಿ, ಹಾಗೂ ಎಸ್.ಜೆ. ಎಂ.ವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ರಾಯಾಪುರ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು.ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಜಾಬ್ ಮೇಳವನ್ನು ಉದ್ಘಾಟಿಸಿದ ಶ್ರೀ ಅರವಿಂದ ಬೆಲ್ಲದ, ವಿರೋಧ ಪಕ್ಷದ ಉಪನಾಯಕರು ಹಾಗೂ ಶಾಸಕರು ಹುಬ್ಬಳ್ಳಿ ಧಾರವಾಡ ಪಶ್ಚಿಮ -74 ಇವರು ಆಗಮಿಸಿದಂತ ಉದ್ಯೋಗ ಆಕಾಂಕ್ಷಿಗಳನ್ನು ಕುರಿತು ಮಾತನಾಡುತ್ತಾ, ಪ್ರಸ್ತುತ ಸ್ಪರ್ಧಾತ್ಮಕ ಹಾಗೂ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಕೌಶಲ್ಯ ಬರಿತ ಜೀವನ ತಮ್ಮದಾಗಲಿ. ಉದ್ಯೋಗವೆಂಬುದು ಕೇವಲ ಜೀವನೋಪಾಯದ ಸಾಧನವಲ್ಲ, ಅದು ಯುವಜನರ ಕನಸುಗಳಿಗೆ ಪ್ರತಿಭೆಗೆ ಮತ್ತು ಸಾಮರ್ಥ್ಯಕ್ಕೆ ಸೂಕ್ತವಾದ ವೇದಿಕೆ. ಪ್ರಸ್ತುತ ಮಹಾಂತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಉದ್ಯೋಗ ಮೇಳ ಹಲವಾರು ಉದ್ಯೋಗಾವಕಾಶಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವುದರ ಜೊತೆಗೆ, ನಮ್ಮ ಯುವಜನರ ಕೌಶಲ್ಯ ಮತ್ತು ಪ್ರತಿಭೆಯನ್ನು ಗುರುತಿಸುವ ಮಹತ್ವದ ವೇದಿಕೆಯಾಗಿದೆ ಎಂದರು. ಜ್ಞಾನ ನಮ್ಮ ಶಕ್ತಿ, ಕೌಶಲ್ಯ ನಮ್ಮ ಸಾಮರ್ಥ್ಯ, ಅವಕಾಶ ನಮ್ಮ ಯಶಸ್ಸಿನ ಮೆಟ್ಟಿಲು ಎನ್ನುತ್ತಾ ಇಂತಹ ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಐಟಿಸಿ ಲಿಮಿಟೆಡನ ಕಾರ್ಯಕ್ರಮ ಅಧಿಕಾರಿಗಳಾದಂತ ಶ್ರೀ ಮನೋಜ್ ಅವರು ಪ್ರಸ್ತುತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕೌಶಲ್ಯವು ಅತ್ಯಂತ ಅವಶ್ಯಕ. ಇಂತಹ ಉದ್ಯೋಗ ಮೇಳಗಳು ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿ ಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಕಾರ್ಯಕ್ರಮ. ಇಂತಹ ಜಾಬ್ ಮೇಳದಲ್ಲಿ ಭಾಗವಹಿಸುವ ಮೂಲಕ ತಜ್ಞರಿಂದ ಉದ್ಯೋಗ ತರಬೇತಿ ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿ ಯೋಜನೆ ಕುರಿತು ಸಲಹೆ ಪಡೆಯಿರಿ. ಇಂತಹ ಉದ್ಯೋಗ ಮೇಳಗಳು ತಮ್ಮಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುವತ್ತವೆ ಎನ್ನುತ್ತಾ ಐಟಿಸಿ ಯೋಜನೆಗಳ ಕುರಿತು ವಿವರಿಸಿದರು.  ಅಧ್ಯಕ್ಷತೆ ವಹಿಸಿದ್ದ ಮಹಾಂತ ಮಹಾವಿದ್ಯಾಲಯದ ಪ್ರಾಚಾರ್ಯರಾದಂತಹ ಡಾ. ಪುಷ್ಪಾ ಬಸನಗೌಡರವರು ಮಾತನಾಡುತ್ತಾ, ಉದ್ಯೋಗಾಕಾಂಕ್ಷಿಗಳು ಇಂತಹ ಸುವರ್ಣ ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ. ನಿಮ್ಮ ಕನಸುಗಳು ಗರಿಗೆದರಲು ಇಂತಹ ಉದ್ಯೋಗ ಮೇಳಗಳು ಅವಕಾಶ ಕಲ್ಪಿಸುತ್ತವೆ. ಉದ್ಯೋಗದಾತರೇ ನಿಮ್ಮ ಮನೆ ಬಾಗಿಲಿಗೆ ಬಂದಾಗ ಅಂತಹ ಅವಕಾಶಗಳ ಸದುಪಯೋಗ ಮಾಡಿಕೊಳ್ಳುವುದರ ಜೊತೆಗೆ ಭವಿಷ್ಯವನ್ನು ರೂಪಿಸಿಕೊಳ್ಳಿ. ಶಿಕ್ಷಣದ ಜೊತೆಗೆ  ಉತ್ತಮ ಕೌಶಲ್ಯ ರೂಡಿಸಿಕೊಳ್ಳಿ ಎನ್ನುತ್ತಾ ಆಗಮಿಸಿದಂತ ಉದ್ಯೋಗಾಕಾಂಕ್ಷಿಗಳಿಗೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಉದ್ಘಾಟಕರಾಗಿ ಆಗಮಿಸಿದಂತ ಶ್ರೀ ಅರವಿಂದ್ ಬೆಲ್ಲದ್, ವಿರೋಧ ಪಕ್ಷದ ನಾಯಕರು ಹಾಗೂ ಶಾಸಕರು ಹುಬ್ಬಳ್ಳಿ ಧಾರವಾಡ ಪಶ್ಚಿಮ 74 ಇವರನ್ನು ಉದ್ಯೋಗ ಮೇಳದ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿಶ್ರೀ ವೆಂಕಟರಮಣ ರೆಡ್ಡಿ,ರಾಜ್ಯ ಸಂಯೋಜನಾಧಿಕಾರಿ, ಕರ್ನಾಟಕ, ಶ್ರೀ ಪುನೀತ್ ಕಾರ್ಯಕ್ರಮ ಮುಖ್ಯಸ್ಥರು, ಶ್ರೀ ಬರಮಣ್ಣ ಕ್ಲಸ್ಟರ್ ಲೀಡರ್, ಶ್ರೀ ಮುತ್ತುರಾಜ್ ಆರ್ ಮೈಸೂರ್ ಕ್ಲಸ್ಟರ್ ಲೀಡರ್, ಶ್ರೀಮತಿ ಗೀತಾ ಕುಲಕರ್ಣಿ ಅಸ್ಸಿಸ್ಟಂಟ್ ಕಂಟ್ರೋಲರ್ ಧಾರವಾಡ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕೇಂದ್ರ  ಇವರು ಉಪಸ್ಥಿತರಿದ್ದರು   ಆರಂಭದಲ್ಲಿ ಅಂಧ ವಿದ್ಯಾರ್ಥಿ ಶಿವಕುಮಾರ್ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸಂಯೋಜಕರಾದ ಪ್ರೊ. ಜಿ.ಸಿ ಕಡ್ಡಿಪುಡಿ ಆಗಮಿಸಿದಂತ ಸರ್ವರನ್ನು ಸ್ವಾಗತಿಸಿದರು. ಪ್ರಥಮ ಎಜುಕೇಶನ್ ಫೌಂಡೇಶನ್ ಸೆಂಟರ್  ನ ಕೇಂದ್ರ ಮುಖ್ಯಸ್ಥರಾದಂತಹ ಶ್ರೀ ಪ್ರದೀಪ ಉದ್ಯೋಗ ಮೇಳದ ಮಹತ್ವದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಮೇಶ್ ಸಿ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಜಯಲಕ್ಷ್ಮಿ ಯಂಡಿಗೇರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಐ ಟಿ ಸಿ ಯ ಕಚೇರಿ ಸಿಬ್ಬಂದಿ, 35ಕ್ಕೂ ಹೆಚ್ಚು ಕಂಪನಿಗಳು, 500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು, ಮಹಾಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Aug 11, 2026 | 02:56 PM
69 0