ಗ್ರಾಹಕರಿಗೆ ಪ್ರತಿ ಯೂನಿಟ್ಗೆ ರೂ.10 ಪೈಸೆ ಮರುಪಾವತಿ
ಗ್ರಾಹಕರ ಸೇವೆಯೆ ನಮ್ಮ ಮೊದಲ ಆದ್ಯತೆ
ಹುಬ್ಬಳ್ಳಿ, ಮೇ 06, 2026 : ಇಂಧನ ಸಚಿವರಾದ ಕೆ.ಜೆ ಜಾರ್ಜ್ ಅವರ ಮಾರ್ಗದರ್ಶನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹೆಸ್ಕಾಂ, 2024-25ರ ಸಾಲಿನಲ್ಲಿ 153.46 ಕೋಟಿ ರೂ. ಉಳಿತಾಯ ಮಾಡಿದ್ದು, ಈ ಹಣವನ್ನು ಗ್ರಾಹಕರಿಗೆ ಮರು ಪಾವತಿಸುತ್ತಿದ್ದೇವೆ ಎಂದು ಹೆಸ್ಕಾಂ ಅಧ್ಯಕ್ಷರಾದ ಸೈಯದ್ ಅಜೀಮ್ಪೀರ್ ಎಸ್. ಖಾದ್ರಿ ಅವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವಿದ್ಯುತ್ ಖರೀದಿ, ಪೂರೈಕೆಯನ್ನು ಉತ್ತಮವಾಗಿ ನಿರ್ವಹಿಸಿದ ಪರಿಣಾಮ 2024-2025ರಲ್ಲಿ ಹೆಸ್ಕಾಂ 153.46 ಕೋಟಿ ರೂ. ಉಳಿತಾಯ ಮಾಡಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್ಸಿ) ಆದೇಶದ ಅನ್ವಯ 2024-25 ನೇ ಆರ್ಥಿಕ ವರ್ಷದ ಪ್ರತಿಯೊಬ್ಬ ಗ್ರಾಹಕರಿಗೆ ಮಾತ್ರ 2024-25ನೇ ಸಾಲಿನ ಅವಧಿಯಲ್ಲಿ ಅವರ ನಿಜವಾದ ಬಳಕೆಯನ್ನು ಆಧರಿಸಿ ಪ್ರತಿ ಯೂನಿಟ್ಗೆ 10 ಪೈಸೆಯಂತೆ 2026-2027ರಲ್ಲಿ ಪ್ರತಿ ತಿಂಗಳು ಸಮಾನ ಕಂತುಗಳಲ್ಲಿ (12 ಕಂತುಗಳು) ಮರು ಪಾವತಿಸಲಾಗುತ್ತದೆ. ಈ ಮೊತ್ತವನ್ನು ವಿದ್ಯುತ್ ಬಿಲ್ನಲ್ಲಿ ಆರ್ಥಿಕ ವರ್ಷ (FY) 25 ಟ್ರೂ ಅಪ್ ಶುಲ್ಕ ಎಂದು ಪ್ರತ್ಯೇಕವಾಗಿ ನಮೂದಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಸದಾ ರೈತರ ಪರ ಕೆಲಸ ಮಾಡುತ್ತಿದೆ. ರೈತರಿಗೆ ಹಗಲು ಹೊತ್ತಿನಲ್ಲಿಯೇ ಏಳು ಗಂಟೆಗಳ ಕಾಲ ವಿದ್ಯುತ್ ನೀಡುವ ನಿಟ್ಟಿನಲ್ಲಿ ಕುಸುಮ್ ಬಿ ಹಾಗೂ ಕುಸುಮ್ ಸಿ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗ್ರಾಹಕರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಯಶಸ್ವಿಯಾಗಿದೆ. ಮುಖ್ಯಮಂತ್ರಿಗಳ ಹಾಗೂ ಇಂಧನ ಸಚಿವರ ಸಹಕಾರದೊಂದಿಗೆ ಹೆಸ್ಕಾಂ ಜನಪರವಾಗಿ ಕೆಲಸ ಮಾಡುತ್ತಿದೆ. ರೈತರ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ನೀಡಲು ನವೀಕೃತ ಶೀಘ್ರ ಸಂಪರ್ಕ ಯೋಜನೆಯನ್ನೂ ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.