ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ವಿದ್ಯಾರ್ಥಿಗಳು ಇತರರ ಏಳಿಗೆಯನ್ನು ಪ್ರೋತ್ಸಾಹಿಸಬೇಕು. ಅಸೂಯೆ ಪಡದೆ ಅವರಂತೆ ನಾವು ಕೂಡ ಹೆಚ್ಚು ಅಂಕ ಪಡೆದು ಸಮಾಜದಲ್ಲಿ ಕೀರ್ತಿ ತರಬೇಕು'ಎಂದು ಸೋಮನಹಳ್ಳಿ ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಡಾ. ಆನಂದ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಭುವನೇಶ್ವರಿ ನಗರದ ಮಾಸ್ಟರ್ ಪಿಯು ಕಾಲೇಜಿನಲ್ಲಿ ಆಯೋಜಿಸಲಾದ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ರೈತರಿಗೆ ಅಭಿನಂದನ ಸಮಾರಂಭದಲ್ಲಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳನ್ನು ಸ್ನೇಹಿತರಂತೆ ಭಾವಿಸಿ ಅವರಿಗೆ ಕಾಲೇಜಿನಲ್ಲಿ ನಡೆದ ಪಾಠ ಪ್ರವಚನದ ಬಗ್ಗೆ ವಿಚಾರಿಸಬೇಕು. ತಮ್ಮ ಮಕ್ಕಳು ಯಾವ ರೀತಿ ವಿದ್ಯಾಭ್ಯಾಸ ಮಾಡುತ್ತಾರೆ ಎಂಬುದರ ಬಗ್ಗೆ ಗಮನ ಹರಿಸಬೇಕು' ಎಂದು ತಿಳಿಸಿದರು.
ಪ್ರಾಂಶುಪಾಲ ಮಲ್ಲಿಕಾರ್ಜುನ ಕೆ.ಎಸ್, ಮಾತನಾಡಿ,' ರೈತರ ಶ್ರಮ ವಿದ್ಯಾರ್ಥಿಗಳಿಗೆ ಅರಿವಾಗಲಿ, ಹಾಗೆಯೇ ಅವರಿಗೆ ಗೌರವ ಕೊಡುವುದನ್ನು ಕಲಿಯಲಿ ಎಂದು ವಿದ್ಯಾರ್ಥಿಗಳ ಮುಂದೆ ರೈತರಿಗೆ ಅಭಿನಯಿಸಲಾಯಿತು' ಎಂದು ತಿಳಿಸಿದರು.
ರೈತ ಪಾಪಣ್ಣ ಮಾತನಾಡಿ' ನಮಗೆ ಅಭಿನಂದಿಸಿರುವುದು ಹೆಮ್ಮೆಯ ಸಂಗತಿ. ಯಾರೊಬ್ಬರೂ ರೈತರ ಬಗ್ಗೆ ಗಮನ ಹರಿಸುತ್ತಿರಲಿಲ್ಲ. ಇದು ಎಲ್ಲರಿಗೂ ಮಾದರಿಯಾಗಲಿ' ಎಂದರು.
ಸಮಾರಂಭದಲ್ಲಿ ಶೇ. 95ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪದಕ, 10ಸಾವಿರ ನಗದು ಮತ್ತು ಸನ್ಮಾನ ಮಾಡಲಾಯಿತು. ಎನ್.ಜಿ. ಗಂಗಣ್ಣ, ಪಾಪಣ್ಣ, ಪ್ರಾಧ್ಯಾಪಕರು ಮುಂತಾದವರಿದ್ದರು.
ವರದಿ : ಪಬ್ಲಿಕ್ ರೈಡ್ ದೇವರಾಜ್