ಬೆಳಗಾವಿ/ಸವದತ್ತಿ: ಬಡ ಹಾಗೂ ಅಗತ್ಯವಿರುವ ಮಕ್ಕಳಿಗೆ ನೆರವು ನೀಡುವ ಉದ್ದೇಶದಿಂದ ಜೀವ ಧ್ವನಿ ಫೌಂಡೇಶನ್ ವತಿಯಿಂದ ಸವದತ್ತಿ ಕ್ಷೇತ್ರದ ಶ್ರೀ ತ್ರಿಮೂರ್ತಿ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಬಟ್ಟೆ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಜೀವ ಧ್ವನಿ ಫೌಂಡೇಶನ್ನ ಸಂಸ್ಥಾಪಕ ನಿಖಿಲ್ ಹಂಜಗಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗತ್ಯವಿರುವ ಮಕ್ಕಳಿಗೆ ಹೊಸ ಬಟ್ಟೆಗಳನ್ನು ವಿತರಿಸಲಾಯಿತು. ಹೊಸ ಬಟ್ಟೆಗಳನ್ನು ಪಡೆದ ಮಕ್ಕಳು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೀವ ಧ್ವನಿ ಫೌಂಡೇಶನ್ನ ಕಿರಣ್ ಕೊಪ್ಪದ್ ಹಾಗೂ ಗುರು ಉಂಕಿ, ಶ್ರೀ ತ್ರಿಮೂರ್ತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಬಸವರಾಜ ಅವರು ಹಾಗೂ ಶಿಕ್ಷಕ ವರ್ಗದವರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಬಡ ಮತ್ತು ಅಗತ್ಯವಿರುವ ಮಕ್ಕಳಿಗೆ ನೆರವಾಗುವ ಮೂಲಕ ಅವರಲ್ಲಿ ಸಂತಸ ಮೂಡಿಸುವುದರ ಜೊತೆಗೆ, ಸಮಾಜದಲ್ಲಿ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಇಂತಹ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ಜೀವ ಧ್ವನಿ ಫೌಂಡೇಶನ್ ತಿಳಿಸಿತು.
ಸಮಾಜದ ದುರ್ಬಲ ವರ್ಗದವರ ನೆರವಿಗೆ ಸಂಘ-ಸಂಸ್ಥೆಗಳು ಮುಂದಾಗಬೇಕು ಎಂಬ ಸಂದೇಶವನ್ನು ಈ ಸೇವಾ ಕಾರ್ಯಕ್ರಮ ಸಾರಿತು.