ಹುಬ್ಬಳ್ಳಿ: ಹುಬ್ಬಳ್ಳಿಯ ನವ ಆನಂದನಗರದ ನಿವಾಸಿಗಳ ಬಹುದಿನಗಳ ಆಕ್ರೋಶಕ್ಕೆ ಈಗ ನೇರ ಪುರಾವೆ ಸಿಕ್ಕಿದೆ. ಸ್ಥಳೀಯರು ತಮ್ಮ ಮನೆಗಳ ನಳಗಳಲ್ಲಿ (taps) ತುಂಬಿಸಿಕೊಂಡ ನೀರನ್ನು ಬಟ್ಟೆಯಿಂದ ಸಾಣಿಸಿದಾಗ ಕಸ, ಕೊಳೆ ಹಾಗೂ ಹೊಲಸು ಪತ್ತೆಯಾಗಿದೆ. ಅಂದರೆ, ಪೈಪ್ಲೈನ್ ಮೂಲಕವೇ ಮನೆಗಳಿಗೆ ಕಲುಷಿತ ನೀರು ಬರುತ್ತಿದೆ ಎಂಬುದು ಸ್ಪಷ್ಟವಾಗಿದೆ.
ನಿವಾಸಿಯೊಬ್ಬರು ಮಾತನಾಡಿ, “ನಾವು ನಳ ತೆರೆದರೆ ಬಣ್ಣ ಬದಲಾದ, ದುರ್ವಾಸನೆಯ ನೀರು ಬರುತ್ತದೆ. ಸಾಣಿ ಬಟ್ಟೆ ಹಿಡಿದಾಗ ಅದರಲ್ಲಿ ಮಣ್ಣು, ತ್ಯಾಜ್ಯ ತುಂಬಿಕೊಂಡು ಬರುತ್ತದೆ. ಅದೇ ನೀರು ಕುಡಿದರೆ ಅನಾರೋಗ್ಯ ಗ್ಯಾರೆಂಟಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣದ ಪರಿಹಾರಕ್ಕೆ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ. ಸಮಸ್ಯೆ ಬಗೆಹರಿಸದಿದ್ದರೆ ಆರೋಗ್ಯ ಸಂಕಷ್ಟ ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ.
ನವ ಆನಂದನಗರದಲ್ಲಿ ಕುಡಿಯುವ ನೀರು ಸಂಪೂರ್ಣ ಅಶುದ್ಧವಾಗಿದ್ದು, ನಳದಲ್ಲೇ ಕಸ ಬೆರೆತ ನೀರು ಪೂರೈಕೆಯಾಗುತ್ತಿದೆ. ಇದು ಗಂಭೀರ ನಿರ್ಲಕ್ಷ್ಯಕ್ಕೆ ನಿದರ್ಶನ.